ಕುಟುಂಬಸ್ಥರಿಂದ ಜೀವ ಬೆದರಿಕೆ ಆರೋಪ; 14 ವರ್ಷದ ಮಗನಿರುವ ಮಹಿಳೆ ಹಾಗೂ 22ರ ಯುವಕನ ವಿವಾಹ
ಮೈಸೂರು: ಪ್ರೀತಿಗೆ ವಯಸ್ಸಿನ ಮಿತಿ ಹಾಗೂ ಸಾಮಾಜಿಕ ಚೌಕಟ್ಟುಗಳ ಅಡ್ಡಿಯಿಲ್ಲ ಎಂಬುದನ್ನು ಸಾಬೀತುಪಡಿಸಿರುವ ಜೋಡಿಯೊಂದು, ಕುಟುಂಬಸ್ಥರ ವಿರೋಧದ ನಡುವೆಯೂ ವಿವಾಹವಾಗಿ ಈಗ ರಕ್ಷಣೆ ಕೋರಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮೆಟ್ಟಿಲೇರಿದೆ.
ಘಟನೆಯ ವಿವರ: ಬೆಂಗಳೂರಿನ ಚಳ್ಳಘಟ್ಟ ನಿವಾಸಿ ಕವಿತಾ (37) ಹಾಗೂ ಮೈಸೂರಿನ ಭಾಸ್ಕರ್ (22) ಪರಸ್ಪರ ಪ್ರೀತಿಸಿ ವಿವಾಹವಾದವರು. ಕವಿತಾ ಅವರಿಗೆ ಈಗಾಗಲೇ ವಿವಾಹವಾಗಿದ್ದು, 14 ವರ್ಷದ ಪುತ್ರನಿದ್ದಾನೆ. ಎಂಟು ವರ್ಷಗಳ ಹಿಂದೆ ಪತಿ ನಿಧನರಾದ ನಂತರ ಅವರು ಪೋಷಕರ ಮನೆಯಲ್ಲಿದ್ದರು. ಟಿಟಿ ಹಾಗೂ ಆಟೋ ಚಾಲಕನಾಗಿದ್ದ ಭಾಸ್ಕರ್ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು.
ವಿರೋಧದ ನಡುವೆ ಮದುವೆ:
ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರ ಸಂಬಂಧಕ್ಕೆ ಕವಿತಾ ಕುಟುಂಬಸ್ಥರಿಂದ ತೀವ್ರ ವಿರೋಧವಿತ್ತು. ಮನೆಯವರು ಕವಿತಾ ಅವರಿಗೆ ಮರು ವಿವಾಹ ಮಾಡಲು ಮುಂದಾದಾಗ, ಈ ಜೋಡಿ ಬೆಂಗಳೂರಿನಿಂದ ಮೈಸೂರಿಗೆ ಬಂದು ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ಕಿಡ್ನಾಪ್ ದೂರು ಹಾಗೂ ಜೀವಭಯ:
ಈ ಸಂಬಂಧ ಕವಿತಾ ತಂದೆ ಮಲ್ಲಿಕಾರ್ಜುನ್ ಅವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನ್ನ ಮಗಳ ಅಪಹರಣವಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅತ್ತ, ತಮಗೆ ಪ್ರಾಣ ಬೆದರಿಕೆ ಇದೆ ಎಂದು ನವಜೋಡಿ ಆರೋಪಿಸಿದೆ. "ನಮಗೆ ಬದುಕಲು ಬಿಡಿ, ಇಲ್ಲವಾದಲ್ಲಿ ಆತ್ಮಹತ್ಯೆಯೇ ದಾರಿ" ಎಂದು ಜೋಡಿ ಅಳಲು ತೋಡಿಕೊಂಡಿದ್ದು, ಸದ್ಯ ಮೈಸೂರಿನ ರಮ್ಮನಹಳ್ಳಿಯಲ್ಲಿ ಆಶ್ರಯ ಪಡೆದಿದ್ದಾರೆ. 15 ವರ್ಷಗಳ ವಯಸ್ಸಿನ ಅಂತರವಿರುವ ಈ ವಿವಾಹ ಪ್ರಕರಣ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.









Comments
Leave a Comment