ಕೊಂದ ಮೇಲೆ ಹೆಣದ ಬೆರಳನ್ನೇ ಲಾಕರ್ಗೆ ಒತ್ತಿದ ಕಟುಕ; 'ಅಕ್ಕ' ಎಂದು ಕರೆಯುತ್ತಲೇ ರಕ್ತದ ಓಕುಳಿ ಹರಿಸಿದ ಪೈಶಾಚಿಕ ಕಿರಾತಕ ಮೀನಾ!
ನವದೆಹಲಿ: ಯಾರು ನಮಗೆ ಆಶ್ರಯ ನೀಡುತ್ತಾರೋ ಅವರ ಬೆನ್ನಿಗೇ ಚೂರಿ ಹಾಕುವ ವಿಕೃತ ಮನಸ್ಥಿತಿ ಇಂದು ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ದೆಹಲಿಯಲ್ಲಿ ನಡೆದ ಯುಪಿಎಸ್ಸಿ ಆಕಾಂಕ್ಷಿಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆ ಸಾಗುತ್ತಿದ್ದಂತೆ, ಆರೋಪಿ ರಾಹುಲ್ ಮೀನಾ ಎಂಬ ಕ್ರೂರಿಯ ಅಸಲಿ ಮುಖವಾಡ ಕಳಚಿಬಿದ್ದಿದೆ. ಆತ ಪೊಲೀಸರ ಮುಂದೆ ನೀಡುತ್ತಿರುವ ಹೇಳಿಕೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದ್ದು, ಕ್ರೈಂ ಲೋಕದ ಭೀಕರತೆಯನ್ನು ಅನಾವರಣಗೊಳಿಸಿವೆ.
'ಅಕ್ಕ' ಎನ್ನುತ್ತಲೇ ಕತ್ತು ಹಿಸುಕಿದ ಪಾಪಿ!
ವಿಚಾರಣೆ ವೇಳೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದಂತೆ ಮಾತನಾಡುತ್ತಿರುವ ರಾಹುಲ್ ಮೀನಾ, ಕೊಲೆಯಾದ ಯುವತಿಯನ್ನು "ಅಕ್ಕ" ಎಂದು ಕರೆಯುತ್ತಿದ್ದಾನೆ. "ಆ ಅಕ್ಕ ಕೇಳಿದಷ್ಟು ಹಣ ಕೊಟ್ಟಿದ್ದರೆ ನಾನು ಕೊಲೆ ಮಾಡುತ್ತಿರಲಿಲ್ಲ" ಎಂಬ ಆತನ ವಾದ ಕೇಳಿ ಖುದ್ದು ಪೊಲೀಸರೇ ಹೌಹಾರಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ಮನೆಯೊಳಗೆ ನುಗ್ಗಿದ್ದ ಈತನಿಗೆ ಯುವತಿ ಪ್ರತಿರೋಧ ಒಡ್ಡಿದ್ದೇ ಸಾವಿಗೆ ಕಾರಣವಾಯಿತು ಎಂದು ಆತ ಸಮರ್ಥಿಸಿಕೊಂಡಿದ್ದಾನೆ. ಮನೆಯಲ್ಲಿ ಸಿಕ್ಕ ದೀಪದಿಂದಲೇ ಯುವತಿಯ ತಲೆಗೆ ಹೊಡೆದು, ಆಕೆ ಪ್ರಜ್ಞೆ ತಪ್ಪಿದ ನಂತರ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಹೆಣದ ಬೆರಳಲ್ಲಿ ಲಾಕರ್ ತೆರೆಯುವ ಪ್ರಯತ್ನ!
ಹತ್ಯೆಯ ನಂತರ ಈತ ನಡೆಸಿದ ಪೈಶಾಚಿಕ ಕೃತ್ಯಗಳು ಮನುಷ್ಯ ಕುಲಕ್ಕೇ ಕಪ್ಪುಚುಕ್ಕೆ. ಯುವತಿಯ ಪ್ರಾಣಪಕ್ಷಿ ಹಾರಿಹೋದ ನಂತರ, ಆಕೆಯ ಮೃತದೇಹವನ್ನು ಕೆಳಮಹಡಿಗೆ ಎಳೆದುಕೊಂಡು ಹೋಗಿದ್ದಾನೆ. ಹಣದ ಹಪಾಹಪಿ ಎಷ್ಟಿತ್ತೆಂದರೆ, ಆಕೆಯ ರಕ್ತಸಿಕ್ತ ಬೆರಳನ್ನು ಲಾಕರ್ನ ಸ್ಕ್ಯಾನರ್ಗೆ ಒತ್ತಿ ಲಾಕರ್ ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಮೃತ ದೇಹದಲ್ಲಿ ಚಲನೆ ಇಲ್ಲದ ಕಾರಣ ಸ್ಕ್ಯಾನರ್ ಕೆಲಸ ಮಾಡಿಲ್ಲ. ಕೊನೆಗೆ ಸ್ಕ್ರೂಡ್ರೈವರ್ನಿಂದ ಲಾಕರ್ ಒಡೆದು ಚಿನ್ನಾಭರಣ ದೋಚಿದ್ದಾನೆ.
ಸರಣಿ ಅಪರಾಧಗಳ ಹಿನ್ನೆಲೆ:
ಈ ರಾಕ್ಷಸ ದೆಹಲಿಗೆ ಬರುವ ಮುನ್ನವೇ ತನ್ನ ಕ್ರೌರ್ಯ ಮೆರೆದಿದ್ದ. ಅಲ್ವಾರ್ನಲ್ಲಿ ತನ್ನ ಸ್ವಂತ ಸ್ನೇಹಿತನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಕದ್ದಿದ್ದ. ಆ ಮೊಬೈಲ್ ಮಾರಿ ಬಂದ 6,000 ರೂಪಾಯಿಯಲ್ಲಿ ದೆಹಲಿಗೆ ಕ್ಯಾಬ್ ಮಾಡಿಕೊಂಡು ಬಂದಿದ್ದ ಈತನಿಗೆ ಆನ್ಲೈನ್ ಬೆಟ್ಟಿಂಗ್ ಚಟವಿತ್ತು. ದರೋಡೆ ಮಾಡಿದ ಹಣವನ್ನು ತನ್ನ ಕುಟುಂಬಕ್ಕೆ ತಲುಪಿಸುವ 'ಅಗತ್ಯ' ನನಗಿತ್ತು ಎಂದು ಈತ ತನ್ನ ಪಾಪದ ಕೃತ್ಯವನ್ನು ನ್ಯಾಯಸಮ್ಮತಗೊಳಿಸಲು ಯತ್ನಿಸುತ್ತಿದ್ದಾನೆ.
ಪೊಲೀಸ್ ಕಸ್ಟಡಿಯಲ್ಲಿರುವ ಮೀನಾ:
"ಆ ಮನೆಯವರು ನನಗೆ ದೇವರಂತೆ ಇದ್ದರು, ತುಂಬಾ ಒಳ್ಳೆಯವರು. ಆದರೆ ನನಗೆ ಹಣದ ತುರ್ತು ಇತ್ತು. ನಾನು ಸಿಕ್ಕಿಬೀಳುತ್ತೇನೆ ಎಂದು ಗೊತ್ತಿದ್ದರೂ ಕೃತ್ಯ ಎಸಗಿದೆ" ಎಂದು ಕೂಲಾಗಿ ಹೇಳಿಕೆ ನೀಡುತ್ತಿದ್ದಾನೆ.
ಸದ್ಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಈ 'ನರಹಂತಕ'ನ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕ್ರೂರಿಗೆ ಕಠಿಣ ಶಿಕ್ಷೆಯಾಗಲಿ ಎಂಬ ಕೂಗು ಕೇಳಿಬರುತ್ತಿದೆ.








Comments
Leave a Comment