ಅಯ್ಯನಕೆರೆಯಲ್ಲಿ ಸಂಭವಿಸಿದ ದುರಂತ ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಏಳನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಸಾವು; ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದ ಪಾರಾಗಲು ಗೆಳೆಯರೊಂದಿಗೆ ಕೆರೆಗೆ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಕರುಣಾಜನಕ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಸುಪ್ರಸಿದ್ಧ ಅಯ್ಯನಕೆರೆಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ದಂಟರಮಕ್ಕಿ ನಿವಾಸಿಗಳಾದ ವಿಜಯ್ ಮತ್ತು ಅಶ್ವಿನಿ ದಂಪತಿಯ ಪುತ್ರ ಪೃಥ್ವಿರಾಜ್ (13) ಮೃತಪಟ್ಟ ದುರ್ದೈವಿ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪೃಥ್ವಿರಾಜ್, ಬೇಸಿಗೆ ರಜೆ ಹಿನ್ನೆಲೆಯಲ್ಲಿ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಅಯ್ಯನಕೆರೆಗೆ ಈಜಲು ತೆರಳಿದ್ದನು. ಕೆರೆಯಲ್ಲಿ ಈಜುತ್ತಿದ್ದ ವೇಳೆ ಅನಿರೀಕ್ಷಿತವಾಗಿ ನೀರಿನ ಆಳಕ್ಕೆ ಸಿಲುಕಿದ ಬಾಲಕ ಮೇಲೆ ಬರಲಾಗದೆ ಜಲಸಮಾಧಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಖರಾಯಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ರಜೆಯ ಮಜಾ ಸವಿಯಬೇಕಿದ್ದ ಬಾಲಕ ವಿಧಿವಶನಾಗಿರುವುದು ಕುಟುಂಬಸ್ಥರಲ್ಲಿ ಹಾಗೂ ದಂಟರಮಕ್ಕಿ ಬಡಾವಣೆಯಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.









Comments
Leave a Comment